ಮುಟ್ನೂರಿ ಕೃಷ್ಣ ರಾವ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಸಂಪಾದಕ, ವಿದ್ವಾಂಸ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದವರು. ಅವರು ೧೯೦೭ ರಿಂದ ೧೯೪೫ ರವರೆಗೆ ರಾಷ್ಟ್ರೀಯತಾವಾದಿ ಪ್ರಕಟಣೆಯಾದ ಕೃಷ್ಣ ಪತ್ರಿಕೆಯ ಸಂಪಾದಕರಾಗಿದ್ದರು. ಇವರನ್ನು ತೆಲುಗು ಪತ್ರಿಕೋದ್ಯಮದ ಪ್ರಮುಖ ಎಂದು ಪರಿಗಣಿಸಲಾಗಿದೆ. == ವೈಯಕ್ತಿಕ ಜೀವನ == ಕೃಷ್ಣರಾವ್ ಅವರು ಅಂದಿನ ಕಾಲದ ಮದ್ರಾಸ್ ಪ್ರೆಸಿಡೆನ್ಸಿಯ ಕೃಷ್ಣ ಜಿಲ್ಲೆಯ ದಿವಿ ತಾಲೂಕಿನ ಮುಟ್ನೂರು ಗ್ರಾಮದಲ್ಲಿ ೧೮೭೯ ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು ಚಿಕ್ಕವರಾಗಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡರು. ಅವರ ತಂದೆ ಜಿಲ್ಲೆಯ ಸಂಗೀತಗಾರರಾಗಿದ್ದರು. ಕೃಷ್ಣ ರಾವ್ ಅವರು ತಮ್ಮ ಚಿಕ್ಕಪ್ಪನ ನೆರವಿನಿಂದ ಬೆಳೆದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಂದರ್‌ನ ಹಿಂದೂ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ನಂತರ ಬಂದರ್‌ನ ನೋಬಲ್ ಕಾಲೇಜಿನಲ್ಲಿ ಎಫ್‌ಎ ಕೋರ್ಸ್ ಓದಿದರು. ರಘುಪತಿ ವೆಂಕಟರತ್ನಂ ನಾಯ್ಡು ಇವರ ಶಿಕ್ಷಕರಲ್ಲಿ ಒಬ್ಬರು. ರಾವ್ ಅವರು ತಮ್ಮ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು ಮತ್ತು ಬ್ರಹ್ಮ ಸಮಾಜದ ಸಭೆಗಳಿಗೆ ಹಾಜರಾಗುತ್ತಿದ್ದರು. ನಂತರ ಅವರು ಬಿ.ಎ ಅಧ್ಯಾಯನಕ್ಕಾಗಿ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಹೋದರು.ಅಲ್ಲಿ ಅವರಿಗೆ ಪಟ್ಟಾಭಿ ಸೀತಾರಾಮಯ್ಯನವರ ಪರಿಚಯವಾಯಿತು. ಅವರು ಸಾಹಿತ್ಯದ ಕಡೆಗೆ ಹೆಚ್ಚು ಗಮನಹರಿಸಿದ್ದರಿಂದ, ತಮ್ಮ ಪದವಿಯನ್ನು ಪೂರ್ಣಗೊಳಿಸದೆ ೧೯೦೩ ರಲ್ಲಿ ಬಂದಾರ್‌ಗೆ ಮರಳಿದರು. ವಂದೇ ಮಾತರಂ ಆಂದೋಲನದಿಂದ ಪ್ರೇರಿತರಾದ ಅವರು ೧೯೦೬ ರಲ್ಲಿ ಬಿಪಿನ್ ಚಂದ್ರ ಪಾಲ್ ಅವರೊಂದಿಗೆ ಬಂಗಾಳ ಪ್ರವಾಸ ಮಾಡಿದರು. == ಕುಟುಂಬ == ಇವರು ತಮ್ಮ ಹೆಂಡತಿಯೊಂದಿಗೆ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದನು. ಹಿರಿಯ ಮಗಳು ಮತ್ತು ಇದ್ದ ಒಬ್ಬನೇ ಮಗ ಅವರಿಗಿಂತ ಮುಂಚೆಯೇ ತೀರಿಕೊಂಡರು ಮತ್ತು ಅವರ ಎರಡನೆಯ ಮಗಳು ವಿಧವೆಯಾದಳು. == ವೃತ್ತಿ == ಇವರು ಕೃಷ್ಣ ಪತ್ರಿಕೆಗೆ ಸಹಾಯಕ ಸಂಪಾದಕರಾಗಿ ಸೇರಿದರು. ನಂತರ ೧೯೦೭ ರಲ್ಲಿ ಸಂಪಾದಕರಾಗಿ ಬಡ್ತಿ ಪಡೆದರು ಮತ್ತು ೧೯೪೫ ರಲ್ಲಿ ಅವರು ಸಾಯುವವರೆಗೂ ಅಲ್ಲಿ ಕೆಲಸ ಮಾಡಿದರು. ಅವರು ತಮ್ಮ ಸಂಪಾದಕೀಯಗಳಲ್ಲಿ ಬಡವರ ಕಲ್ಯಾಣ ಮತ್ತು ಅಭಿವೃದ್ಧಿಶೀಲ ಶಿಕ್ಷಣ ಸಂಸ್ಥೆಗಳಿಗೆ ಖರ್ಚು ಮಾಡುವ ಮೊತ್ತದ ಬಗ್ಗೆ ಬ್ರಿಟಿಷ್ ಸರ್ಕಾರದ ನೀತಿಗಳನ್ನು ಟೀಕಿಸಿದರು. ಆಂಧ್ರಭಾರತಿ ಎಂಬ ಪತ್ರಿಕೆಯನ್ನೂ ಕೆಲಕಾಲ ನಡೆಸುತ್ತಿದ್ದರು. == ಸ್ಮಾರಕ == ಇವರು ೨೫ ಜೂನ್ ೧೯೪೫ ರಂದು ಜಲೋದರದಿಂದ ನಿಧನರಾದರು. ಮಚಲಿಪಟ್ಟಣಂನಲ್ಲಿರುವ ಪುರಸಭೆಗೆ ಅವರ ಹೆಸರಿಡಲಾಗಿದೆ. == ಜನಪ್ರಿಯ ಸಂಸ್ಕೃತಿಯಲ್ಲಿ == ಆಂಧ್ರಪ್ರದೇಶ ಮತ್ತು ತೆಲಂಗಾಣದ ತೆಲುಗು ಶಿಕ್ಷಕರ ಸಂಘವು ನವೆಂಬರ್ ೧೮, ೨೦೨೨ ರಂದು ಮುಟ್ನೂರಿ ಕೃಷ್ಣರಾವ್ ಅವರ ಜನ್ಮದಿನವನ್ನು ಆಚರಿಸಿತು.ಇವರ ಸ್ಮರಣಾರ್ಥ ೧೯೪೫ ರಲ್ಲಿ 'ಕೃಷ್ಣ ಪತ್ರಿಕೆ' ಮೂಲಕ ಮುಟ್ನುರಿ ಕೃಷ್ಣರಾವ್ ಅವರ ಕೊಡುಗೆಗಳ ಐತಿಹಾಸಿಕ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು, ಜೊತೆಗೆ ಪತ್ರಕರ್ತರು ವಹಿಸಿದ ಪ್ರಮುಖ ಪಾತ್ರ ಮತ್ತು ನಮ್ಮ ದೇಶಕ್ಕೆ ಅವರ ಅಮೂಲ್ಯ ಸೇವೆಗಳ ಬಗ್ಗೆ ಸ್ಮರಿಸಲಾಯಿತು. == ಉಲ್ಲೇಖಗಳು ==